ಹಿಂದಿನ ಕಾಲದಲ್ಲಿ 25 ರಿಂದ 30 ಜನರ ಅವಿಭಕ್ತ ಕುಟುಂಬ ಇತ್ತು ಮತ್ತು ಅವರ ಸಂಬಂಧ ಕೂಡ ತುಂಬಾನೆ ಸ್ಟ್ರಾಂಗ್ ಆಗಿತ್ತು. ಆದರೆ ಇಂದಿನ ಸಂಬಂಧಗಳು ತುಂಬಾನೆ ವೀಕ್ ಆಗಿರುತ್ತೆ. ಆ ಸಂಬಂಧ ತುಂಬಾ ಸಮಯದವರೆಗೆ ಉಳಿಯೋದು ದೂರದ ಮಾತು.
ಮೊದಲೆಲ್ಲಾ ಒಂದು ಕುಟುಂಬ ಅಂದರೆ 20-30 ಜನ ಒಂದೇ ಸೂರಿನಡಿ ಬದುಕುತ್ತಿದ್ರು, ಆದರೆ ಇಂದು, ನಮ್ಮ ಕುಟುಂಬದಲ್ಲಿ ಕೇವಲ 2-4 ಜನರಿದ್ದಾರೆ, ಅದನ್ನು ಸಹ ನಿಭಾಯಿಸಲು ನಮಗೆ ಸಾಧ್ಯವಾಗುತ್ತಿಲ್ಲ. ಹೀಗಿರೋವಾಗ ನಾವು ಮನೆ ಕೆಲಸ ಮಾಡಲು ಸೇವಕಿಯರನ್ನು, ಮಕ್ಕಳನ್ನು ನಿರ್ವಹಿಸಲು ಬೇಬಿ ಸಿಟ್ಟರ್ಗಳನ್ನು ಮತ್ತು ಮನೆಯ ಉಳಿದ ಕೆಲಸಗಳಿಗೆ ಸೇವಕರನ್ನು ನೇಮಿಸಿಕೊಳ್ಳುತ್ತಿದ್ದೇವೆ. ಇಷ್ಟೆಲ್ಲಾ ಆದ್ರೂ, ಮನೆಮಂದಿ ನಡುವೆ ಜಗಳ, ಮನಸ್ಥಾಪ ಮುಗಿಯೋದಿಲ್ಲ. ಇದರಿಂದ ಸಂಬಂಧಗಳು ಆರಂಭವಾಗುವ ಹೊತ್ತಿಗೆ ಮುಗಿದು ಹೋಗುತ್ತೆ.
ಇತ್ತೀಚಿನ ದಿನಗಳಲ್ಲಿ ಸಣ್ಣ ಕುಟುಂಬವನ್ನೆ ನಮ್ಮಿಂದ ನಿರ್ವಹಿಸೋಕೆ ಆಗ್ತಿಲ್ಲ, ಆದರೆ ಹಿಂದಿನ ಕಾಲದಲ್ಲಿ, 20 ರಿಂದ 25 ಅಥವಾ ಅದಕ್ಕಿಂತ ಹೆಚ್ಚಿನ ಜನರು ಪ್ರೀತಿಗೆ ಕೊರತೆ ಇಲ್ಲದೇ ಮತ್ತು ಯಾವುದೇ ಸಮಸ್ಯೆಯಿಲ್ಲದೆ ಹೇಗೆ ಒಟ್ಟಿಗೆ ವಾಸಿಸುತ್ತಿದ್ದರು? ಅಂತಹ ದೊಡ್ಡ ಬದಲಾವಣೆಗಳಾಗೋದಕ್ಕೆ ಕಾರಣ ಏನು?
ಅವಿಭಕ್ತ ಕುಟುಂಬದಿಂದ ಹೆಚ್ಚಿನ ಪ್ರಯೋಜನ:
ಇಂದು ಹೆಚ್ಚಿನ ಹುಡುಗರು ಮತ್ತು ಹುಡುಗಿಯರು ಮದುವೆಯ ನಂತರ ಕುಟುಂಬದಿಂದ ಪ್ರತ್ಯೇಕವಾಗಿ ವಾಸಿಸಲು ಪ್ರಾರಂಭಿಸಿದ್ದಾರೆ. ಇದಕ್ಕೆ ಒಂದು ಕಾರಣವೆಂದರೆ ಗೌಪ್ಯತೆ, ಕೆಲಸ ಅಥವಾ ಜವಾಬ್ದಾರಿಗಳನ್ನು ತಪ್ಪಿಸುವುದು, ಆದರೆ ಈ ಮೊದಲು ಇದು ಹಾಗಿರಲಿಲ್ಲ. ಕುಟುಂಬದಲ್ಲಿ ಎಷ್ಟು ಗಂಡು ಅಥವಾ ಸೊಸೆಯಂದಿರು ಬಂದರೂ, ಯಾರೂ ಮನೆಯಿಂದ ಬೇರ್ಪಡುವ ಬಗ್ಗೆ ಮಾತನಾಡುತ್ತಿರಲಿಲ್ಲ.
ಇದಕ್ಕೆ ಮುಖ್ಯ ಕಾರಣವೆಂದರೆ, ನಾವು ದೊಡ್ಡ ಕುಟುಂಬದಲ್ಲಿ ವಾಸಿಸುವಾಗ, ಜವಾಬ್ದಾರಿಗಳು ಸ್ವಯಂಚಾಲಿತವಾಗಿ ವಿಭಜಿಸಲ್ಪಡುತ್ತವೆ ಮತ್ತು ನೀವು ಎಲ್ಲಿಗಾದರೂ ಹೋಗಬೇಕಾದರೆ ಮಕ್ಕಳನ್ನು ಚಿಕ್ಕಪ್ಪ, ಚಿಕ್ಕಮ್ಮ, ಅಜ್ಜಿ ಅಥವಾ ಅತ್ತೆ, ಮಾವ ಯಾರೋಂದಿಗಾದರೂ ಬಿಟ್ಟು ಹೋಗಬಹುದಿತ್ತು.
ತಪ್ಪನ್ನು ತಿದ್ದೋರು ಇಲ್ಲ, ತಿದ್ದೋರು ಬೇಕಾಗೂ ಇಲ್ಲ:
ಹಿಂದಿನ ಕಾಲದಲ್ಲಿ, ಕುಟುಂಬದಲ್ಲಿ ಅನೇಕ ಸದಸ್ಯರಿದ್ದರು, ಆವಾಗ ವಿವಾಹಿತ ದಂಪತಿಗಳಲ್ಲಿ ಜಗಳವಾಗುತ್ತಿದ್ದಾಗ ಅಥವಾ ಸಹೋದರರು ತಮ್ಮೊಳಗೆ ಜಗಳವಾಡುತ್ತಿದ್ದರೆ, ಮನೆಯ ಹಿರಿಯರು ಅದನ್ನು ಪರಿಹರಿಸುತ್ತಿದ್ದರು ಮತ್ತು ಪರಸ್ಪರ ಭಿನ್ನಾಭಿಪ್ರಾಯಗಳನ್ನು ತೆಗೆದುಹಾಕುತ್ತಿದ್ದರು.
ವಿಚ್ಛೇದನವು ಸಾಮಾನ್ಯವಾಗಿದೆ:
ನಮ್ಮ ತಾಯಿ-ಅಜ್ಜಿ ಅಥವಾ ತಾತ ಅವರ ಕಾಲದಲ್ಲಿ ವಿಚ್ಛೇದನದಂತಹ ಯಾವುದೇ ವಿಷಯವಿರಲಿಲ್ಲ, ಒಮ್ಮೆ ಮದುವೆಯಾದ ನಂತರ ಅದನ್ನು ಉಳಿಸಿಕೊಳ್ಳಬೇಕಾಗಿತ್ತು. ಗಂಡ ಮತ್ತು ಹೆಂಡತಿಯ ನಡುವೆ ಎಷ್ಟೇ ಜಗಳಗಳು ನಡೆದರೂ, ಪರಸ್ಪರ ವಿಚ್ಛೇದನ ಪಡೆಯಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಅರಿತುಕೊಂಡು ಬಾಳ್ವೆ ನಡೆಸುತ್ತಿದ್ದರು.
ಆದರೆ ಇಂದು ಪರಿಸ್ಥಿತಿ ಹೇಗಿದೆಯೆಂದರೆ, ಸಣ್ಣ ಜಗಳವನ್ನು ಪರಿಹರಿಸುವ ಬದಲು, ಚರ್ಚೆಯ ಕಿಡಿಯನ್ನು ಹಚ್ಚಲಾಗುವುದು, ಈ ಜಗಳ, ಕೋಪ ಎಷ್ಟು ದೊಡ್ಡದಾಗುತ್ತೆ ಅಂದ್ರೆ, ಕೊನೆಗೆ ಸಂಬಂಧ ಮುರಿದು ಬೀಳುತ್ತದೆ. ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ರೇಪ್, ದೈಹಿಕ ಕಿರುಕುಳದ ಬಗ್ಗೆ ಧ್ವನಿ ಎತ್ತುವುದು ಮತ್ತು ವಿಚ್ಛೇದನ ನೀಡುವುದು ಸರಿ, ಆದರೆ ಸಣ್ಣ ಪುಟ್ಟ ವಿಷಯಗಳಿಗೆ ಸಂಬಂಧ ಕೊನೆಗೊಳಿಸೋದು ಎಷ್ಟು ಸರಿ?
ತಾಳ್ಮೆ ಮತ್ತು ಪ್ರೀತಿ:
ಇಂದು, ಜನರ ಮನಸ್ಥಿತಿ ಹೇಗಾಗಿದೆ ಅಂದ್ರೆ ಇಷ್ಟವಾದ ಆಹಾರ ಕೊಡಿಸದಿದ್ರೆ, ತಿರುಗಾಡಲು ಕರೆದುಕೊಂಡು ಹೋಗದೇ ಇದ್ರೆ, ಶಾಪಿಂಗ್ ಕರೆದುಕೊಂಡು ಹೋಗದೇ ಇರುವಂತಹ ಸಣ್ಣ ವಿಷಯಗಳಿಗೆ ಜಗಳಗಳು ಪ್ರಾರಂಭವಾಗುತ್ತವೆ, ಇದು ಹಿಂದಿನ ಕಾಲದಲ್ಲಿ ಇರಲಿಲ್ಲ. ಪುರುಷರು ಮತ್ತು ಮಹಿಳೆಯರು ಇಬ್ಬರೂ ತಾಳ್ಮೆ ಮತ್ತು ಪರಸ್ಪರ ಪ್ರೀತಿಯಿಂದ ಇದ್ರು. ಈ ಹಿಂದೆ ಜನರು ಯಾವುದೇ ಸಣ್ಣ ವಿಷಯದ ಬಗ್ಗೆ ಕೋಪ ಮಾಡ್ತಾನೆ ಇರಲಿಲ್ಲ, ಆದರೆ ಅಂತಹ ವಿಷಯಗಳನ್ನು ಮರೆತು ಸಂಬಂಧವನ್ನು ಬಲಪಡಿಸಲು ಪ್ರಯತ್ನಿಸಿದರು, ಆದರೆ ಇಂದಿನ ಜನರಲ್ಲಿ ತಾಳ್ಮೆಯೇ ಇಲ್ಲ.
ಇದ್ದುದ್ರಲ್ಲಿ ಖುಷಿ ಪಡೋದು:
ಪ್ರತಿಯೊಬ್ಬರೂ ದೊಡ್ಡ ಮನೆ, ಕಾರು, ಖಾಸಗಿ ಶಾಲೆಗಳಲ್ಲಿ ಮಕ್ಕಳನ್ನು ಓದಿಸಲು ಬಯಸುತ್ತಾರೆ. ಜೊತೆಗೆ ದುಡ್ಡು ಮಾಡೋದಕ್ಕೆ ದೇಶ, ವಿದೇಶ ಸುತ್ತಾಡ್ತೀವಿ. ಹಣ ಮಾಡೋದಕ್ಕೆ, ತಮ್ಮ ಶೋಕಿಯ ಜೀವನ ನಡೆಸೋದಕ್ಕೆ ಎಲ್ಲರೂ ಒದ್ದಾಡ್ತಾ, ಹಣ ಮಾಡ್ತಾ ಕುಟುಂಬದಿಂದ ದೂರವಾಗಿ, ತಮ್ಮ ಜೀವನದ ಬಗ್ಗೆ ಮಾತ್ರ ಯೋಚನೆ ಮಾಡ್ತಾ, ಮತ್ತಷ್ಟು ಹಣ ಸಂಪಾದನೆ ಮಾಡುವ ಮಾರ್ಗದತ್ತ ಲಗ್ಗೆ ಇಡ್ತಿದ್ದಾರೆ ಜನ.
ನೆರೆಹೊರೆಯವರ ಬಳಿ ಕಾರು ಇದ್ದರೆ, ನಾವು ಸಹ ಅದನ್ನು ತೆಗೆದುಕೊಳ್ಳುತ್ತೇವೆ ಅಥವಾ ಆ ಜನರು ಇಡೀ ಕುಟುಂಬದೊಂದಿಗೆ ಶಿಮ್ಲಾ ಪ್ರವಾಸಕ್ಕೆ ಹೋಗುತ್ತಿದ್ದರೆ, ನಾವು ಸಹ ಹೋಗುತ್ತೇವೆ ಇವೆಲ್ಲವೂ ತಮ್ಮ ಸ್ಟಾಂಡರ್ಡ್ ಹೆಚ್ಚಿಸೋದಕ್ಕೆ ಅಷ್ಟೇ. ಆದರೆ ಈ ಮೊದಲು ಹೀಗಿರಲಿಲ್ಲ, ಆ ಯುಗದಲ್ಲಿ ಜನರು ತಮ್ಮ ಬಳಿ ಏನಿದೆಯೋ ಅಥವಾ ನಮಗೆ ಏನು ಸಿಕ್ಕಿದೆಯೋ ಅದರಲ್ಲಿ ಜನರು ಸಂತೋಷವಾಗಿರುತ್ತಿದ್ದರು. ಇದರಿಂದ ಆ ಜನರು ಏನೂ ಇಲ್ಲದೇ ಇದ್ದರೂ ಸಹ ನೆಮ್ಮದಿಯಾಗಿರುತ್ತಿದ್ದರು.